- ಹಗಲು ಬಾಡುವ ಹೊತ್ತು ಇರುಳು ಮೆಲ್ಲನೆ ಕಣ್ತೆರೆದಿತ್ತು. ಸೂರ್ಯ ಮುಳುಗಿತ್ತಿದ್ದ ಸಮುದ್ರದಾಳಕ್ಕೆ ಇಳಿಯುತ್ತಿದ್ದ. ಇಳಿವ ಸೂರ್ಯನ ಕೆಂಪು ಬೆಳಕಿನಲ್ಲಿ ನಮ್ಮ ಬದುಕಿನ ಸಂಜೆಯಲ್ಲಿ ನೆನಪುಗಳ ಬುತ್ತಿ ಬಿಚ್ಚಿಕೊಂಡಿತು.
- ಈ ಹುಡುಗಿ ನನ್ನ ಬದುಕಿಗೆ ಬಂದು ಅದೆಷ್ಟು ವರ್ಷಗಳಾದವು. ದಶಕಗಳೇ ಕಳೆದು ಹೋದವು. ಆದರೂ ಕೆಲವೊಮ್ಮೆ ಅನಿತಾ ಅಪ್ಪಟ ಅಪರಿಚಿತಳಂತೆ ಕಂಡುಬಿಡುತ್ತಾಳೆ - ವಿವೇಕ್
- ಯುದ್ದ ಮುಗಿದಿತ್ತು ಯುರೋಪಿನಲ್ಲಿ. ನನ್ನೆದೆಯ ಕದನಕ್ಕೆ ಕೊನೆ ಎಲ್ಲಿತ್ತು? ಎಲ್ಲಿ ಅಮ್ಮ ಅಕ್ಕ ತಮ್ಮ? ಎಲ್ಲವರು? ಬದುಕುಳಿದರೆ, ಬಲಿಯಾದರೆ, ಹೇಳಲು ಯಾರಿದ್ದರು? ಇಲ್ಲಿ ಒಡೆಯಬಹುದೆ ನನ್ನ ಇತಿಹಾಸದ ಒಡವುಗಳೆಲ್ಲ. ಮರಳಿ ಎದುರಾಗಬಹುದೆ, ಹೊರಳಿ ಬರಬಹುದೆ ನನ್ನವರು ಚರಿತ್ರೆಯ ಆಳದಿಂದೆದ್ದು?
- ಎಷ್ಟೊಂದು ಬದುಕು ಹಿಂದಿದೆ. ಒಂದಿಷ್ಟೇ ಬದುಕು ಮುಂದೆ. ಕಳೆದ ಬದುಕಿನ ತುಂಬಾ ಹುಡುಕಾಟವಿದೆ- ಹೊರಗೆ ಹುಡುಕಿದ್ದು, ನನ್ನೊಳಗೆ ಹುಡುಕಿದ್ದು, ಎದೆಯಕದಗಳನ್ನೆಲ್ಲ ತಟ್ಟಿ ತಡಕಿದ್ದು, ಯಾರು ನಾವು? ಎಲ್ಲಿಂದ ಬಂದೆವು?
- ಕಳೆದುಕೊಳ್ಳಬಹುದಾದ ಎಲ್ಲವನ್ನೂ ಕಳೆದುಕೊಂಡ ಮೇಲೆ ಇನ್ನು ಕಳೆದುಕೊಳ್ಳುವ ಭಯವೆ ಇಲ್ಲದ ನಿರ್ಲಿಪ್ತತೆ ಆ ಬಿರಿದ ಕಣ್ಣುಗಳಲ್ಲಿ.
- ಗೋರಿಗಳ ಎದುರಲ್ಲಿ ಸತ್ತವರ ನಡುವೆ ಅಗಲಿದ ಆತ್ಮಗಳ ಇರುವಲ್ಲಿ ಎರಡು ಎಳೆಯ ಜೀವಗಳ ನಡುವೆ ಒಂದು ನೋವಿನ ಸಂಬಂಧ, ಮೌನದಲ್ಲಿ, ನಿಶ್ಶಬ್ದದಲ್ಲಿ ಏಕಾಂತದಲ್ಲಿ ಆರಂಭವಾಗಿತ್ತು... ಆ ಸಂಬಂಧಕ್ಕೆ ಯೌವನದ ಬುದ್ಬುರಗಳಿರಲಿಲ್ಲ, ಕಿಶೋರದ ಆವೇಗವಿರಲಿಲ್ಲ. ಧುಮುಕುವ ಜಲಪಾತದ ಭೋರ್ಗರೆತವಿರಲಿಲ್ಲ. ಸಮುದ್ರದ ಮೊರೆತವಿರಲಿಲ್ಲ.
- ಬಹುಶ: ನನಗೆಂದೂ ಸ್ಮಶಾನ, ಗೋರಿಪಾಳ್ಯ ಇವೆಲ್ಲವೂ ಭಯದ ವಿಷಯವಾಗಲೇ ಇಲ್ಲ.
- ನನ್ನದೊಂದೇ ಪ್ರಶ್ನೆ - ಯುದ್ದ ಯಾವಾಗ ಮುಗಿಯುತ್ತೆ.
- ಹೊರಗಿನಿಂದ ಬಂದ ಬ್ರಿಟಿಷರನ್ನು ತೊಲಗಿ ಭಾರತದಿಂದ ಎಂದು ಮಾಡಬಹುದು. ನಮ್ಮೊಳಗಿನಿಂದಲೇ ನಮ್ಮ ನಡುವೆಯೇ ಹುಟ್ಟುವ ಹಿಟ್ಲರುಗಳನ್ನು ತೊಲಗಿಸುವುದು ಹೇಗೆ?
- ಹಣ ಏನು ಯಾರ್ ಬೇಕಾದ್ರು ಸಂಪಾದಿಸ್ತಾರೆ. ಗುಣ ತರಾಕಾಗುತ್ತಾ.. ಅಪ್ಪಟ ಅನಕ್ಷರಸ್ಥ ಅಮ್ಮ ಹೇಳಿದ್ದಳು!
- ಮತ್ತೆಲ್ಲವನ್ನೂ ಎಲ್ಲರನ್ನೂ ಕಿತ್ತುಕೊಂಡಿದೆ ಬದುಕು ನನ್ನಿಂದ. ಶಾಶ್ವತ ವಿಷಾದದ ಏಕತಾನತೆಯಷ್ಟೇ ಇನ್ನು ಉಳಿದಿರುವುದು.
- ಯಾರು ಉಳಿದಿರಬಹುದು ನನ್ನ ಇಡೀ ವಂಶದಲ್ಲಿ? ಯಾರು ಉಳಿದಿರಬಹುದು ನನ್ನ ರಕ್ತ ಹಂಚಿಕೊಂಡವರಲ್ಲಿ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅತ್ತೆಯಂತೆಯೇ ನಾನೂ ನನ್ನ ವಂಶದ ಕತೆಗಳನ್ನು ಹೇಳಬಲ್ಲೆನೆ? ನನ್ನೊಳಗಿನ ಈ ಕತೆಗಳು ನನ್ನೊಡನೆಯೇ ಮಣ್ಣಾಗುತ್ತವೆಯೇ?
- ಬರಲಿರುವ ನಾಳೆಗಳಲ್ಲಿ ನಿನ್ನೆಗಳ ಹುಡುಕಿ ಹೋಗುವ ತುಡಿತವಿತ್ತು. ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡುವ ತವಕವಿತ್ತು. ಅವೆಲ್ಲವೂ ಸದ್ಯಕ್ಕೆ ಹ್ಯಾನಾಳ ಎದೆಯ ಗೂಡಿನಲ್ಲಿ ಭದ್ರ ಕದ ಬಿಗಿದು ಅಗುಳೆ ಹಾಕಿತ್ತು.
- ಮರೆಯಬಹುದೆ ತನ್ನವರನ್ನು ಅವರ ಸಾವು ಬದುಕಿನ ಪತ್ತೆ ಇಲ್ಲದ ಭೂತವನ್ನು, ಹಿಂದೆ ಬಿಟ್ಟು ಬಂದ ಬದುಕನ್ನು?
- ‘ಹಾಂ. ನಡೆದಿತ್ತು ಒಂದೇ ಒಂದು’ ಹಿಟ್ಲರನ ವಿರುದ್ದ ನಡೆದ ಒಂದೇ ಒಂದು ಸಾರ್ವಜನಿಕ ಪ್ರತಿಭಟನೆ - ಮಹಿಳೆಯರದಾಗಿತ್ತು!
- ನನಗೆ ನಂಬಿಕೆ ಇದೆ ಜನಗಳ ಶಕ್ತಿಯಲ್ಲಿ ಅನ್ಯಾಯದ ವಿರುದ್ದ ದನಿ ಎನ್ನುವ ಜನರ ಸಂಘಟನೆಯಲ್ಲಿ ನಾನೇನೂ ಆಗದಿದ್ದರೂ, ಆ ಗುಂಪಿನಲ್ಲೊಂದು ಸಣ್ಣ ದನಿಯಾಗಲು ಬಯಸುತ್ತೇನೆ.
- ಹಿಟ್ಲರ್ ನಿಜಕ್ಕೂ ಅಂದು ಸತ್ತನೆ? ಇಲ್ಲ ಇಲ್ಲಿ ಎಲ್ಲೋ ಯಾರದೋ ಮಿದುಳಲ್ಲಿ, ಎದೆಯಲ್ಲಿ ಇನ್ನೂ ಉಸಿರಾಡುತ್ತಿರುವನೆ, ಸಮಯ ಕಾದು ಜಿಗಿದು ಹೊರಬರಲು? ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಹುದು. ಅಮೇರಿಕಾದಲ್ಲೂ ಇಸ್ರೇಲಿನಲ್ಲೂ ಅಹಿಂಸೆಯನ್ನೇ ಬೋಧಿಸಿದ ನಮ್ಮ ಭಾರತದಲ್ಲೂ. ನಮ್ಮೆದ್ಯ ಅಸಹನೆಯಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ಅಹಂಕಾರದಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ದುರಭಿಮಾನದಲ್ಲಿ. ಯಾವುದೇ ಕ್ಷಣವನ್ನು ಗಲಭೆಯಾಗಿಸಿ, ರಕ್ತಪಾತವಾಗಿಸಿ ವಿಜ್ರಂಭಿಸಲು ಕಾದ ಹಿಟ್ಲರನಿದ್ದಾನೆ. ಬಹುಶ: ನಮ್ಮೊಳಗೇ ಅವನ ಸಂಹಾರವಾಗಬೇಕಿದೆ ನಮ್ಮೊಳಗೇ....
( ನೇಮಿಚಂದ್ರರವರ ಇತ್ತೀಚೆಗೆ ಬಿಡುಗಡೆಯಾದ ಯಾದ್ ವಶೇಮ್ ಕಾದಂಬರಿಯ ಕೆಲವು ಆಯ್ದ ವಾಕ್ಯಗಳು)
3 comments:
ಹಣ ಏನು ಯಾರ್ ಬೇಕಾದ್ರು ಸಂಪಾದಿಸ್ತಾರೆ. ಗುಣ ತರಾಕಾಗುತ್ತಾ.. ಅಪ್ಪಟ ಅನಕ್ಷರಸ್ಥ ಅಮ್ಮ ಹೇಳಿದ್ದಳು!
very meaningful lines..
Nice thougts are here.. Keep it up Vee (Sory I dont know your name)
Malli
www.nannahaadu.blogspot.com
Yes...
naanU Odiddeeni Yaad vashEm.
ee kAdambari vyaapakavaagi charchege barabEkittu.
bahaLa chennagide.
- chetana thirthahalli.
ಹಲವಾರು ಚಿಂತನೆಗಳನ್ನು ಸರಳವಾಗಿ ಚಿತ್ರಿಸಿದ್ದಿರಿ!
ನಿಮ್ಮ ಬ್ಲಾಗ್ ಬಣ್ಣವನ್ನ ಸ್ವಲ್ಪ ಬದಲಿಸಿದರೆ ಓದಲು ಇನ್ನೂ ಸುಲಭವಾದೀತು.
ವಿನೋದ್.
Post a Comment